ಬಿಜೆಪಿ ಮುಖಂಡನ ಮೇಲೆ ಹಲ್ಲೆ

  • In Crime
  • October 6, 2020
  • 199 Views
ಬಿಜೆಪಿ ಮುಖಂಡನ ಮೇಲೆ ಹಲ್ಲೆ

ಸಿಂದಗಿ: ಪಟ್ಟಣದ ಹೊರವಲಯದ ಆಲಮೇಲ ರಸ್ತೆಯಲ್ಲಿನ ಅರ್ಪಿತಾ ಡಾಬಾದಲ್ಲಿ ಬಿಜೆಪಿ ಯುವ ಮುಖಂಡನ ಮೇಲೆ ತಲವಾರದಿಂದ ದಾಳಿ ನಡೆಸಿ ಕೊಲೆ ಯತ್ನ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ತಾಲೂಕು ಬಿಜೆಪಿ ಮಂಡಲದ ಓಬಿಸಿ ವಿಭಾಗದ ಅಧ್ಯಕ್ಷ ರವಿಕಾಂತ ಮಡಿವಾಳಪ್ಪ ನಾಯ್ಕೋಡಿ (೨೯) ಸೋಮವಾರ ರಾತ್ರಿ ತನ್ನ ಆಪ್ತರೊಂದಿಗೆ ಅರ್ಪಿತಾ ದಾಬಾದಲ್ಲಿ ಊಟಕ್ಕೆ ಕುಳಿತಾಗ ಸಿಂದಗಿ ತಾಲ್ಲೂಕಿನ ಬಬಲೇಶ್ವರ ಗ್ರಾಮದ ಅನೀಲ ಜಟ್ಟೆಪ್ಪ ಬರಗಾಲ, ತಲವಾರನಿಂದ ಏಕಾಏಕಿ ದಾಳಿ ನಡೆಸಿದ್ದಾನೆ. ದಾಳಿ ವೇಳೆ ರವಿಕಾಂತ ತನ್ನ ಎಡಗೈಯನ್ನು ಅಡ್ಡ ತಂದಿದ್ದು ಕೈಗೆ ಭಾರಿ ಪೆಟ್ಟಾಗಿದೆ. ಪಕ್ಕದಲ್ಲಿದ್ದ ಮಲ್ಲು ಬಾದನ ಹಾಗೂ ನಾಗಪ್ಪ ಬಿರಾದಾರ ಅವರು ಆರೋಪಿಗಳ ದಾಳಿಯನ್ನು ತಡೆಯಲು ಮುಂದಾದಾಗ ಆರೋಪಿ ಅನೀಲ ತನ್ನ ಜೊತೆಗಾರನಾದ ತಾಲೂಕಿನ ರಾಂಪೂರ ಪಿ.ಎ. ಗ್ರಾಮದ ಯುವರಾಜ ಸೇರಿದಂತೆ ಇತರ ನಾಲ್ಕೈದು ಜನರೊಂದಿಗೆ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.
ಮಾರಣಾಂತಿಕ ಹಲ್ಲೆಯಲ್ಲಿ ರವಿಕಾಂತನ ಕೈಗೆ ಹರಿತವಾದ ತಲವಾರ ಏಟಿನಿಂದ ಕೈಗೆ ಭಾರಿ ಪೆಟ್ಟಾಗಿದ್ದು, ತಕ್ಷಣವೇ ಸಿಂದಗಿ ಸರಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಮಾಡಿದ ಬಬಲೇಶ್ವರ ಗ್ರಾಮದ ಅನಿಲ ಜಟ್ಟೆಪ್ಪ ಬರಗಾಲ ಹಾಗೂ ರಾಂಪೂರ ಪಿ.ಎ ಗ್ರಾಮದ ಯುವರಾಜ ಸೇರಿದಂತೆ ಪರಿಚಯವಿಲ್ಲದ ಇತರ ನಾಲ್ಕೈದು ಜನರ ವಿರುದ್ಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ರವಿಕಾಂತ, ಈ ಕೆಲವು ದಿನಗಳ ಹಿಂದೆ ಆರೋಪಿತನೊಬ್ಬ ನನ್ನ ಹಿಂದೆ, ಮುಂದೆ ಮತ್ತು ಹೋದಲ್ಲಿ, ಬಂದಲ್ಲಿ ಹಿಂಬಾಲಿಸುತ್ತಿದ್ದ. ಅವನಿಂದ ನಡೆದ ಈ ದಾಳಿ ನನ್ನ ಕೊಲೆಗೆ ಯಾರಿಂದಲೋ ಸುಫಾರಿ ನೀಡಿದ್ದಾಗಿದೆ ಎಂದು ಆರೋಪಿಸಿದ್ದಾನೆ.
ಹಲ್ಲೆ ಮಾಡಿದ ಮುಖ್ಯ ಆರೋಪಿ ಹಾಗು ಹಲ್ಲೆಗೊಳಗಾದ ಬಿಜೆಪಿ ಮುಖಂಡ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಈ ಹಿಂದೆ ಗ್ರಾಮದಲ್ಲಿ ನಡೆದ ಹಣದ ವ್ಯವಹಾರದ ಹಿನ್ನಲೆ ಈ ಕೊಲೆ ಯತ್ನ ನಡೆದಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos