ಬೇಲೂರು:ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಿಸಲು ಮೀಸಲಿಟ್ಟಿರುವ ೫ ಗುಂಟೆ ಪ್ರದೇಶವು ಸಾಲದಾಗಿದ್ದು ಬದಲಿಗಿ ಸರ್ವೆನಂಬರ್ ೫೦ ರಲ್ಲಿ ೧.೧೦ ಎಕರೆ ಭೂಮಿ ಕೊಡಿಸುವಂತೆ ಗ್ರಾಮಸ್ತರು ಒತ್ತಾಯಿಸಿದ್ದಾರೆ.
ಈ ಸರ್ವೆ ನಂಬರ್ ಸ್ಥಳದಲ್ಲಿ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿದ್ದು ಇದರೊಂದಿಗೆ ಸರಕಾರಿ ಆಸ್ಪತ್ರೆ, ಪಶುಆಸ್ಪತ್ರೆ, ಸ್ಮಶಾನ ಇದ್ದು ಇವುಗಳಿಗೆ ಬಳಕೆ ಆಗಿರುವ ಭೂಮಿ ಹೊರತುಪಡಿಸಿ ಉಳಿಯುವ ೧.೧೦ ಎಕರೆ ಭೂಮಿಯನ್ನು ಡಾ.ಅಂಬೇಡ್ಕರ್ ಭವನಕ್ಕೆ ನೀಡಿದರೆ ಎಲ್ಲಾ ರೀತಿಯ ಸೌಲಭ್ಯಗಳುಳ್ಳ ಭವನ ನಿರ್ಮಾಣಕ್ಕೆ ಅನುಕೂಲ ಆಗಲಿದೆ ಎಂದು ಗ್ರಾಮಸ್ಥ ಮುನಿಸ್ವಾಮಿ, ಗ್ರಾ.ಪಂ.ಸದಸ್ಯ ಖಲಂದರ್, ಈರಪ್ಪ, ಕಾಳರಾಜು, ನಿಂಗರಾಜು, ಶಂಕರಯ್ಯ ಇವರುಗಳು ತಿಳಿಸಿದ್ದಾರೆ.
ಕಳೆದ ವರ್ಷ ಭವನ ನಿರ್ಮಿಸಲು ಯೋಚನೆ ಸಿದ್ದವಾಗಿದ್ದರೂ ನಿವೇಶನ ಕೊರತೆಯಿಂದ ೫೦ ಲಕ್ಷರೂ. ಅನುದಾನ ವಾಪಸ್ಸಾಯಿತು. ಇದೀಗ ಶೀಘ್ರವೆ ಭೂಮಿ ನೀಡಿದರೆ ಇನ್ನಷ್ಟು ಅನುದಾನದೊಂದಿಗೆ ಭವನೆ ನಿರ್ಮಾಣಕ್ಕೆ ಅನುಕೂಲ ಆಗಲಿದೆ. ಇದೀಗ ಇರುವ ೫ ಗುಂಟೆ ಪ್ರದೇಶದಲ್ಲಿ ಭವನ ನಿರ್ಮಿಸಲು ತೀರ್ಮಾನಿಸಿರುವ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಪರಿಶೀಲನೆಗೆ ಬಂದರಾದರೂ ಗ್ರಾಮಸ್ಥರ ಒತ್ತಾಯ ಆಲಿಸಿ ಗ್ರಾಮಸ್ಥರ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು. ಪಿಡಿಒ ಹೆಚ್.ಜೆ.ರಮೇಶ್ ಇದ್ದರು.