ದೇವನಹಳ್ಳಿ: ಸ್ವಾಮಿ ವಿವೇಕಾನಂದರ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸುಂದರೇಶ್ (ಸುನೀಲ್)ತಿಳಿಸಿದರು.
ನಗರದ ಹಳೇ ಬಸ್ ನಿಲ್ದಾಣದ ಸಮೀಪದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನದ ಅಂಗವಾಗಿ ಯುವ ಮೋರ್ಚಾ ವತಿಯಿಂದ ತಾಲೂಕು ಕಚೇರಿಯಿಂದ ಹಳೇಬಸ್ ನಿಲ್ದಾಣದವರೆಗೂ ಒಂದು ಕಿಮೀ ವಾಕ್ ಅಥನ್ (ಕಾಲ್ನಡಿಗೆ ಜಾಥಾ) ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಕ್ಕೆ ಉತ್ತಮ ಸಂದೇಶಗಳನ್ನು ನೀಡಿದ ಸ್ವಾಮಿ ವಿವೇಕಾನಂದರು ಪ್ರತಿ ಯುವ ಪೀಳಿಗೆಗೆ ಸ್ಪೂರ್ತಿದಾಯವಾಗಿದೆ. ಇವರ ತತ್ವದಾರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಕೆ.ನಾಗೇಶ್ ಮಾತನಾಡಿ, ಪ್ರತಿಯೊಬ್ಬ ಯುವಕರು ಸ್ವಾಮಿ ವಿವೇಕಾನಂದರ ಜೀವನ ಶೈಲಿ ಪ್ರತಿಯೊಬ್ಬರಿಗೂ ದಾರಿ ದೀಪವಾಗಿದೆ. ಮಹಾತ್ಮ ಗಾಂಧಿಯವರು ಸಹ ಇವರ ಜೀವನ ಚರಿತ್ರೆಯನ್ನು ಓದುವಂತೆ ಹೇಳಿದ್ದಾರೆ. ವಿವೇಕಾನಂದರು ಕಲ್ಕತ್ತಾದಲ್ಲಿ ಜನಿಸಿದ್ದರು. ಬಾಲ್ಯದಿಂದ ತುಂಬ ತುಂಟದಿಂದ ಇದ್ದಂತಹವರು. ಯಾವುದನ್ನು ಸುಲಭವಾಗಿ ಒಪ್ಪದ ವಿವೇಕಾನಂದರು ಎಲ್ಲವನ್ನು ಪ್ರಶ್ನಿಸುತ್ತಿದ್ದ ವ್ಯಕ್ತಿತ್ವ ಅವರದಾಗಿತ್ತು. ದೇವರನ್ನು ಹುಡುಕುವ ಕಾಯಕವನ್ನು ಸಹ ಅವರ ಜೀವನದಲ್ಲಿ ಉಲ್ಲೇಖವಾಗಿದೆ ಎಂದರು.