ಚಾಮರಾಜನಗರ: ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ತುರ್ತು ಚಿಕಿತ್ಸಾ ಕೇಂದ್ರದಲ್ಲಿನ ಆಂಬುಲೆನ್ಸ್ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಹಲವಾರು ದಿನಗಳಿಂದ ಅನಾಥವಾಗಿ ನಿಂತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹದೇಶ್ವರ ಬೆಟ್ಟದಲ್ಲಿ ಹೆಚ್ಚಾಗಿ ಗುಡ್ಡಗಾಡಿನ ಜನರ ಆರೋಗ್ಯ ಕಾಪಾಡುವ ಸಲುವಾಗಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ಕಾರ ಆಂಬುಲೆನ್ಸ್ ನೀಡಿತ್ತು. ಆದ್ರೆ ಆ ಆಂಬುಲೆನ್ಸ್ ಇದೀಗ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಅನಾಥವಾಗಿ ನಿಂತಿದ್ದು, ಈ ಬಗ್ಗೆ ಮಹದೇಶ್ವರ ಬೆಟ್ಟದ ವೈದ್ಯರು ತಲೆ ಕೆಡಿಸಿಕೊಂಡಿಲ್ಲ ಎಂದು ತೋರುತ್ತದೆ.
ಮಹದೇಶ್ವರ ಬೆಟ್ಟದಿಂದ ಬಂದ ಆಂಬುಲೆನ್ಸ್ ನ ಚಾಲಕ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗ ನಿಲ್ಲಿಸಿ ಹೋದವರು ಇತ್ತ ಸುಳಿದೇ ಇಲ್ಲ ಗೊತ್ತಾಗುತ್ತದೆ.
ಆಂಬುಲೆನ್ಸ್ ಚಾಲಕ ಮತ್ತು ಇಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದಾಗಿ ಗುಡ್ಡಗಾಡಿನ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಂತೂ ತಪ್ಪಿದ್ದಲ್ಲ ಎನ್ನುವಂತಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ವಹಿಸುವರೇ ಅಥವಾ ಕಂಡು ಕೇಳಿಯೂ ಮೌನವಾಗಿರುವರೇ ಎಂದು ನೋಡನೋಡಬೇಕಿದೆ.