ಆನೇಕಲ್:ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕ ಹುತಾತ್ಮರಿಗೆ ಅಮರ್ ಜವಾನ್ ಜ್ಯೋತಿ ರಾಜಧಾನಿ ದೆಹಲಿಯ ಇಂಡಿಯ ಗೇಟ್ ಬಳಿ ನಿರ್ಮಿಸಿರುವಂತೆ ಆನೇಕಲ್ನಲ್ಲಿ ಸಹ ಅಮರ್ ಜವಾನ್ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದೆ.
ಸ್ಮಾರಕದ ಉದ್ಘಾಟನೆಯ ಪೂರ್ವಭಾವಿ ಸಭೆ ಹಾಗೂ ಬೃಹತ್ ಬೈಕ್ ರ್ಯಾಲಿಯನ್ನು ಏರ್ಪಡಿಸಿದ್ದು, ನೂರಾರು ಯುವಕರು ಹುತಾತ್ಮರಿಗೆ ಗೌರವ ಸಲ್ಲಿಸಲು ಆಗಮಿಸಿದ್ದರು
ಇದೇ ಸಂದರ್ಭದಲ್ಲಿ ಮಾತನಾಡಿದ ಅಮರ್ ಜವಾನ್ ಸಮಿತಿಯ ಅಧ್ಯಕ್ಷರಾದ ಗಣೇಶ್ ಕುಮಾರ್ ದೇಶದ ಗಡಿಯಲ್ಲಿ ಹಾಗೂ ದೇಶದ ಒಳಗಡೆ ನಮ್ಮನ್ನು ರಕ್ಷಿಸುವ ಉದ್ದೇಶದಿಂದ ಸಾವಿರಾರು ಸೈನಿಕರು ಪ್ರಾಣ ಬಲಿದಾನಗಳನ್ನು ಮಾಡಿದ್ದಾರೆ. ಅಂತಹ ವೀರ ಹುತಾತ್ಮರನ್ನು ಪ್ರತಿದಿನ ನೆನೆಯುವುದು ಕರ್ತವ್ಯವಾಗಿದೆ. ತಾಲೂಕಿನ ಪ್ರತಿಯೊಬ್ಬ ನಾಗರೀಕರಲ್ಲಿ ಸೈನಿಕರ ಬಗ್ಗೆ ಹರಿವು ಹಾಗೂ ಗೌರವವನ್ನು ಬೆಳೆಸುವ ಉದ್ದೇಶದಿಂದ ಆನೇಕಲ್ ಪಟ್ಟಣದಲ್ಲಿ ಅಮರ್ ಜವಾನ್ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಈ ಸ್ಮಾರಕದ ಉದ್ಘಾಟನೆಯನ್ನು ಡಿಸೆಂಬರ್ ೬ರಂದು ನೆರವೇರಿಸಲಿದ್ದು, ಪ್ರತಿಯೊಬ್ಬ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಸೈನಿಕರಿಗೆ ಗೌರವವನ್ನು ಸಲ್ಲಿಸಬೇಕಾಗಿ ತಾಲೂಕಿನ ಜನತೆಯಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಪುರಸಭೆಯ ಸದಸ್ಯ ಮುನಾವರ್, ರಘು ಗಜೇಂದ್ರ, ವಿಜಿ, ಕೃಷ್ಣ ಮತ್ತಿತರರು ಭಾಗವಹಿಸಿದ್ದರು