ಬೆಂಗಳೂರು, ಡಿ. 14 : ತುರ್ತು ಸಂದರ್ಭಗಳಲ್ಲಿ ತಡವಾಗಿ ಆಗಮಿಸುವ ಅಂಬ್ಯುಲೆನ್ಸ್ ಗಳಿಗೆ ದಂಡ ವಿಧಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಅಲ್ಲದೇ ರಾಜ್ಯದಲ್ಲಿ ಹೊಸದಾಗಿ 300 ಅಂಬ್ಯುಲೆನ್ಸ್ ಗಳನ್ನು ಕಾರ್ಯಗತಗೊಳಿಸಲು 150 ಕೋಟಿ ರೂ. ವೆಚ್ಚದ ಪ್ರಸ್ತಾವವನ್ನು ಅನುಮೋದನೆಗಾಗಿ ಸಂಪುಟಕ್ಕೆ ಕಳುಹಿಸಿದೆ.
ಪ್ರಸ್ತಾವನೆಯಲ್ಲಿರುವಂತೆ 20 ನಿಮಿಷದೊಳಗೆ ಸೇವೆ ನೀಡುವಲ್ಲಿ ವಿಫಲವಾದಲ್ಲಿ ಸೇವಾ ಪೂರೈಕೆದಾರರು ಪ್ರತಿ ನಿಮಿಷಕ್ಕೂ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಅಂಬ್ಯುಲೆನ್ಸ್ ಚಾಲಕರ ಕುಡಿದು ವಾಹನ ಚಾಲನೆ ಹಾಗೂ ಸೇವೆಯನ್ನೂ ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲೂ ಇಬ್ಬರು ಸದಸ್ಯರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗುವುದು, ನಗರ ಪ್ರದೇಶಗಳಲ್ಲಿ 20 ನಿಮಿಷ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 30 ನಿಮಿಷದೊಳಗೆ ನಿಗದಿತ ಸ್ಥಳಕ್ಕೆ ತಲುಪದಿದ್ದರೆ ಹೆಚ್ಚುವರಿ ಪ್ರತಿ ನಿಮಿಷಕ್ಕೂ 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಉಪ ನಿರ್ದೇಶಕ ಡಾ. ಸ್ವಾತಂತ್ರ ಕುಮಾರ್ ಬ್ಯಾಂಕರ್ ತಿಳಿಸಿದ್ದಾರೆ.