ಪ್ರೊವಿಡೆನ್ಸ್, ಆ. 8 : ಟಿ20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಗೆ ವೈಟ್ವಾಶ್ ಮಾಡಿದ ಹುರುಪಿನಲ್ಲಿರುವ ಟೀಮ್ ಇಂಡಿಯಾ ಒಂದೇ ದಿನದ ವಿರಾಮ ಮುಗಿಸಿ ಏಕದಿನ ಸರಣಿಗೆ ಅಣಿಯಾಗಿದೆ. 3 ಪಂದ್ಯಗಳ ಮುಖಾಮುಖಿ ಗುರುವಾರದಿಂದ ಆರಂಭವಾಗಲಿದ್ದು, ಇಲ್ಲಿಯೂ ಕೊಹ್ಲಿ ಪಡೆ ಮೇಲುಗೈ ಸಾಧಿಸುವ ಯೋಜನೆಯಲ್ಲಿದೆ. ಆತಿಥೇಯ ವೆಸ್ಟ್ ಇಂಡೀಸ್ ಪಾಲಿಗೆ ಇದು ಭಾರೀ ಸವಾಲಿನ ಸರಣಿ. ಮೊದಲನೆಯದಾಗಿ ಟಿ20 ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ. ಹಾಗೆಯೇ ವಿಶ್ವಶ್ರೇಷ್ಠ ಕ್ರಿಕೆಟಿಗ, ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರಿಗೆ ವಿದಾಯ ಕೊಡುಗೆಯನ್ನೂ ನೀಡಬೇಕಿದೆ. ಭಾರತದೆದುರಿನ ತವರಿನ ಸರಣಿ ಬಳಿಕ ತಾನು ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದೇನೆ ಎಂದು ಗೇಲ್ ಘೋಷಿಸಿದ್ದರು.
ವಿಶ್ವಕಪ್ನ ನೆಚ್ಚಿನ ತಂಡವಾಗಿದ್ದ ಭಾರತ ಸೆಮಿಫೈನಲ್ನಲ್ಲಿ ಎಡವಿದರೆ, ವೆಸ್ಟ್ ಇಂಡೀಸ್ ನಾಕೌಟ್ ಪ್ರವೇಶಿಸುವ ಮೊದಲೇ ಹೊರಬಿತ್ತು. ಈ ಬಲಾಬಲವನ್ನು ಅವಲೋಕಿಸುವಾಗ ಏಕದಿನ ಸರಣಿಯಲ್ಲೂ ಕೊಹ್ಲಿ ಬಳಗ ಫೇವರಿಟ್ ಆಗಿ ಕಾಣುತ್ತದೆ. ರೋಹಿತ್, ರಾಹುಲ್, ಕೊಹ್ಲಿ, ಜಡೇಜ, ಶಮಿ ಅವರೆಲ್ಲ ವಿಶ್ವಕಪ್ನಲ್ಲಿ ಮಿಂಚು ಹರಿಸಿದ್ದರು. ಆದರೆ ಅಪಾಯಕಾರಿ ಬುಮ್ರಾಗೆ ವಿಶ್ರಾಂತಿಯಲ್ಲಿದ್ದಾರೆ.